ನನ್ನ ಹೆಸರು ರೋಹಿತ್ ರಾಮಚಂದ್ರಯ್ಯ. ವಯಸ್ಸು 36 ದಾಟಿದೆ. ಊರು ಬೆಂಗಳೂರು. ವೃತ್ತಿಯಲ್ಲಿ ಸಾಫ್ಟವೇರ್ ತಂತ್ರಜ್ಞ. ಪ್ರವೃತ್ತಿ ಸಮೃದ್ಧ ಕರ್ನಾಟಕದ ಕನಸು ಕಾಣುವುದು. ಅದನ್ನು ನನ್ನ ಮಿತಿಯಲ್ಲಿ ಸಾಕಾರಗೊಳಿಸಲು ಸಹಕಾರ ತತ್ವದಡಿಯಲ್ಲಿ ದುಡಿಯುವುದು. ಸದ್ಯಕ್ಕೆ ನನ್ನ ಕಲ್ಪನೆಯಲ್ಲಿರುವ ಕರ್ನಾಟಕದ ಬಿಂಬವನ್ನು ನಿಮ್ಮ ಮನಗಳಲ್ಲಿ ಪ್ರತಿಬಿಂಬಿಸಲು ಅಣಿಯಾಗಿ ಕುಳಿತಿದ್ದೇನೆ. ಕನ್ನಡ ಎಂಬ ಪದ ಕರ್ನಾಟಕದ ನುಡಿಗೂ ಭೂಪ್ರದೇಶಕ್ಕೂ ಸಮಾನವಾಗಿ ಅನ್ವಯವಾಗುತ್ತದೆ. ಈ ಕನ್ನಡ ಭೂಪ್ರದೇಶದಲ್ಲಿ ಕಾಲಾಂತರದಲ್ಲಿ ಹಲವು ನುಡಿಗಳನ್ನಾಡುವರು ಕಲೆತು ಬಾಳುತ್ತಿದ್ದಾರೆ. ಅವರೆಲ್ಲರನ್ನು ಬಂಧಿಸಿರುವುದು ಕನ್ನಡ ನುಡಿ. ಇವರೆಲ್ಲರೂ ಕನ್ನಡಿಗರು. ಕರ್ನಾಟಕ ಮತ್ತು ಗಡಿನಾಡು ಸಮಸ್ಯೆ ಮೊದಲನೆಯದಾಗಿ ಕರ್ನಾಟಕದ ಆಡಳಿತ ಸರಳಗೊಳಿಸಿಕೊಳ್ಳಲು ಈ ನಾಡಿನ ಗಡಿಗಳನ್ನು ಗುರುತಿಸಿಕೊಳ್ಳಬೇಕಿದೆ. ಕವಿರಾಜಮಾರ್ಗದಲ್ಲಿ ಕನ್ನಡ ಪ್ರದೇಶವನ್ನು ಕಾವೇರಿಯಿಂದ ಗೋದಾವರಿ ನದಿಗಳ ನಡುವೆ ಗುರುತಿಸಲಾಗಿದೆ. 1956ರ ರಾಜ್ಯ ಪುನರ್ವಿಂಗಡಣೆ ಅನ್ವಯ ಕರ್ನಾಟಕದ ಇಂದಿನ ಗಡಿಗಳನ್ನು ಗುರುತಿಸಲಾಗಿದೆ. ಆದರೆ ಇದು ಕನ್ನಡಿಗರೆಲ್ಲರಿಗೂ ಸಮ್ಮತಿಪೂರ್ಣವಾದುದಲ್ಲ. ಈಗಲೂ ಕರ್ನಾಟಕದ ಗಡಿಗಳ ಹೊರಗೆ ನೆರೆಯ ರಾಜ್ಯಗಳಲ್ಲಿ ಕನ್ನಡ ಪ್ರದೇಶಗಳು ಸೇರಿ ಹೋಗಿವೆ. ಮುಖ್ಯವಾಗಿ ಅವನ್ನು ಕರ್ನಾಟಕದೊಳಕ್ಕೆ ತರುವ ಕಾರ್ಯವಾಗಬೇಕು. ಕರ್ನಾಟಕ ಸಮಸ್ತ ಕನ್ನಡಿಗರ ನೆಲೆವೀಡಾ...