ಮನೆಯಿಂದ ಹೊರಗೆ ಕಾಲಿಟ್ಟರೆ ಕಿವಿಗಡಚಿಕ್ಕುವ ಮೈಕಾಸುರನ ಹಾವಳಿ. ಇದು ಮೇ ೫ ರಂದು ಕರ್ನಾಟಕದ ವಿಧಾನಸಭೆಗಾಗಿ ನಡೆಯುವ ಚುನಾವಣೆಗಾಗಿ ನಡೆದಿರುವ ಪ್ರಚಾರದ ಒಂದು ಭಾಗವಷ್ಟೆ. ಐದು ವರ್ಷಗಳಿಂದ ರಾಜ್ಯದ ಜನರನ್ನು ಯಾಮಾರಿಸಿ, ಗುಡಿಸಿ ಗುಂಡಾಂತರ ಮಾಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನವೆಲ್ಲ ಈಗ ಕನ್ನಡಿಗರ ಮತಗಳನ್ನು ಪಡೆಯುವುದರ ಮೇಲೆ. ಆದರೆ ಅವರ ಜೂರತ್ತು ಹೇಗಿದೆ ನೋಡಿ, ಕರ್ನಾಟಕದ ಆಂತರಿಕ ವಿಷಯಗಳ ಬಗ್ಗೆ ಮಾತನಾಡಲಿಕ್ಕೆ, ಕನ್ನಡ ಬಾರದ ಕೇಂದ್ರ ನಾಯಕರುಗಳನ್ನು ಕರೆಸಿ, ಹಿಂದಿಯಲ್ಲೇ ಪ್ರಚಾರ ಭಾಷಣ ಮಾಡಿಸುತ್ತಿದ್ದಾರೆ. ಬಾರದ ನುಡಿಯ, ಇವರುಗಳ ಮಾತುಗಳನ್ನು ಕೇಳಿ ಕನ್ನಡಿಗರು ಇವರಿಗೆ ಮತಹಾಕಬೇಕಂತೆ. ಇನ್ನು ಚುನಾವಣೆಯಲ್ಲಿ ಚರ್ಚಿತವಾಗುತ್ತಿರುವ ವಿಷಯಗಳು ನಿಜವಾಗಿಯೂ ಕರ್ನಾಟಕದ ಜನರು ಕೇಳಬಯಸಿದಂತಹವುಗಳೇ. ಊಹ್ಞೂಂ. ಕೇಂದ್ರದಲ್ಲಿನ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ, ಕರ್ನಾಟಕವೇಕೆ ಕಣವಾಗಬೇಕು. ಕರ್ನಾಟಕದ್ದೇ ನೂರಾರು ಸಮಸ್ಯೆಗಳಿದ್ದಾವೆ. ಅವುಗಳ ಬಗ್ಗೆ ಮಾತನಾಡುವವರು ಯಾರು? ಆಡಿದರೂ ಕೆಲ ಜನಪ್ರಿಯ ವಿಚಾರಗಳನ್ನಷ್ಟೇ ನೆಪ ಮಾತ್ರಕ್ಕೆ ಎತ್ತಿಕೊಳ್ಳುತ್ತಾರೆ. ಉದಾಹರಣೆಗೆ, ಬೆಳಗಾವಿ ಗಡಿ ಸಮಸ್ಯೆ, ಕಾವೇರಿ ನದಿ ನೀರಿನ ಹಂಚಿಕೆ ವಿವಾದ. ಇವು ಮಾತ್ರ ಕನ್ನಡಿಗರ ಸಮಸ್ಯೆಗಳೇ. ನಿಜವಾಗಿಯೂ ಕರ್ನಾಟಕದಲ್ಲಿ ಇದಕ್ಕಿಂತಲೂ ಆಳವಾದ ಅನೇಕ ಚಿಂತಾಜನಕ ಸಮಸ್ಯೆಗಳಿದ್ದಾವೆ. ಅವುಗಳ ಬಗ್ಗೆ ಯ...