ನಾನು ಶಿಸ್ತಾಗಿ ಕೂತು ಏನನ್ನಾದರೂ ನಿಯಮಿತವಾಗಿ ಬರೆದದ್ದು ಅಪರೂಪ. ಮನಸ್ಸಿನಲ್ಲಿ ಕೆಲವು ನಂಬಿಕೆಗಳು ಇದಕ್ಕೆ ಸಹಾಯಕವಾಗಿ ವರ್ತಿಸುತ್ತಿದ್ದವು. ಮೊದಲನೆಯದ್ದು ಬರವಣಿಗೆಯಲ್ಲಿ ತೊಡಗಿರುವವರು ಚಿಂತಕರು. ಅವರಿಂದ ಮಾತ್ರ ಉತ್ತಮ ಬರವಣಿಗೆ ಸಾಧ್ಯ ಎಂಬುದಾದರೆ ಎರಡನೆಯದು ಅಕ್ಷರ ಹಾದರ (ಆತ್ಮ ಸಾಕ್ಷಿಗೆ ನಿಷ್ಟವಾಗದೆ ಬರೆಯುವುದು) ಮಾಡಬಾರದು ಎಂಬುದು. ಈ ಎರಡು ಕಾರಣಗಳ ಮಾದರಿಯಲ್ಲದ, ಆಲೋಚನೆಗಳು ಮೂಡುವ ವೇಗದಲ್ಲಿ ಪದಗಳನ್ನು ಇಳಿಸಲು ಸಾಧ್ಯವಾಗದಿರುವ ಕಾರಣವೂ ಇದೆ. ಆದರೆ ಕಳೆದೊಂದು ವಾರದಿಂದ ನಡೆಯುತ್ತಿರುವ ದೇಶದಲ್ಲಿನ ರಾಜಕೀಯ ವಿದ್ಯಮಾನಗಳು ಹಾಗೂ ನನ್ನ ವೈಯುಕ್ತಿಕ ಜೀವನದಲ್ಲೂ ಆದ ಬದಲಾವಣೆಗಳು, ನನ್ನನ್ನು ಬರೆಯಲು ಕೂರಿಸಿವೆ. ನಾನು ಮತದಾನ ಮಾಡಲು ಅರ್ಹತೆ ಪಡೆದು ೨೦ ವರ್ಷಗಳೇ ದಾಟಿವೆ. ಎಂದೂ ಮತದಾನವನ್ನು ತಪ್ಪಿಸಿಕೊಂಡಿಲ್ಲ. ಪ್ರತಿಬಾರಿಯೂ ನನಗೆ ಸರಿ ತೋಚಿದ ವ್ಯಕ್ತಿ - ಪಕ್ಷಕ್ಕೆ ಬಟನ್ ಒತ್ತಿ ಬಂದಿದ್ದೇನೆ. (ಒಂದೇ ಒಂದು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾತ್ರ ಬ್ಯಾಲಟ್ ಪೇಪರ್ ಮೂಲಕ ಮತಾ ಚಲಾಯಿಸಿದ್ದೆ.) ಪ್ರತಿ ಬಾರಿಯೂ ನನಗೆ ಅತಿ ಆಪ್ತವಾಗಿರುವ ಕನ್ನಡ - ಕರ್ನಾಟಕ - ಕನ್ನಡಿಗ ಕುರಿತಾದ ನೆರೇಟೀವ್ ಗೆ ಸೂಕ್ತ ಹೊಂದುವವರನ್ನು ಬೆಂಬಲಿಸುತ್ತಿದ್ದೇನೆ. ಒಮ್ಮೆ ವಿಜಯ ಸಂಕೇಶ್ವರರ ಕನ್ನಡ ನಾಡು ಪಕ್ಷಕ್ಕೂ ಬಟನ್ ಗುದ್ದಿ ಬಂದದ್ದಿದೆ. ನನಗೆ ಈಗ ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷ ಬೇಕು ಅನ್ನೋ ಮಾತು ಸವಕಲು ನಾಣ್ಯದಂತೆ ಕಾಣತೊಡಗಿದೆ. ಇದನ್ನು ಎಲ್ಲ ಕನ್ನಡ ಆಕ್ಟಿವಿಸ್ಟುಗಳು, ಕನ್ನಡ ಸಂಬಂಧಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುವವರು ಹೇಳಿಕೊಂಡು ಬರುತ್ತಿರುವುದೇ. ಆದರೆ ಇತ್ತಲಾಗಿ ನನಗೆ ನಮ್ಮ ರಾಜ್ಯದ ಸಾಮಾಜಿಕ ವ್ಯವಸ್ಥೆಯೇ ಹಾಗಿದೆ ಎಂದನಿಸತೊಡಗಿದೆ. ಇದು ವೈವಿಧ್ಯತೆಗಳಿಂದ ಕೂಡಿದ ನಾಡು. 'ಒನ್ ಸ್ಟೇಟ್ ಮೆನಿ ವರ್ಡ್ಸ್' ಎಂಬುದು ಅಕ್ಷರಶಃ ಸತ್ಯ. ಹೀಗಿರುವಾಗ ಈ ಬಾರಿಯ ಲೋಕಸಭಾ ಚುನಾವಣೆ ನನ್ನಲ್ಲಿ ಕುತೂಹಲವನ್ನು ಮೂಡಿಸಿತ್ತು. ಒಂದು ರೀತಿಯಲ್ಲಿ ಕನ್ನಡ ರಾಜಾಕಾರಣದ ದಿಕ್ಸೂಚಿ ಎಂದು ಪರಿಗಣಿಸಿದ್ದೆ. ಬಂದ ಫಲಿತಾಂಶ ಮಾತ್ರ ನನ್ನನ್ನು ನಿಬ್ಬೆರಗು ಮಾಡಿದೆ. ಇದರ ಬಗ್ಗೆ ನಾನು ಏನೇ ಮಾತನಾಡಿದರೂ 'ನರಿ ಹಾಗೂ ಹುಳಿ ದ್ರಾಕ್ಷಿ'ಯ ಕತೆಯನ್ನು ನೆನಪಿಸುವ ರೆಟರಿಕ್ ನಂತೆ ಕಾಣಬಹುದು ಎಂಬ ಆತಂಕವಿದೆ. ಆದರೆ ಒಂದು ಅಭಿಪ್ರಾಯವನ್ನು ದಾಖಲಿಸಲಿಕ್ಕೆ ಬರೆಯಲು ಕೂತಿದ್ದೇನೆ. ಹಿಂದೆಲ್ಲ ನಾನು ವೋಟ್ ಹಾಕಲು ಹೋದಾಗ, ಜನ ಒಂದು ನಿರ್ದಿಷ್ಟ ವಿಚಾರವನ್ನು ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಂಡು ಮತ ಹಾಕುತ್ತಿದ್ದುದು ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ ಈಚಿನದು ಬಹಳ ಭಿನ್ನವಾಗಿದ್ದನ್ನ ಕಂಡೆ. ಇದು ಒಂದು ರೀತಿಯಲ್ಲಿ 'ಕಮಿಂಗ್ ಆಫ್ ಏಜ್' ಅಂತಾರಲ್ಲ ಹಾಗಿತ್ತು ಭಾರತದ ಪ್ರಜಾಪ್ರಭುತ್ವಕ್ಕೆ. ೧೮-೨೫ ರಿಂದ ವಾಯಸ್ಸಿನ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದರು. ಅವರ ನಾಡಿಮಿಡಿತವಾನ್ನು ಅರಿಯುವುದರಲ್ಲಿ ನಮ್ಮ ಸಾಂಪ್ರದಾಯಿಕ ಮಾಧ್ಯಮಗಳು ಸೋತವು. ಅದೇ ಹಳೆಯ ಜಾತಿ, ಸಾಮಾಜಿಕ ವ್ಯತ್ಯಾಸಗಳ ಮೇಲೆ ತಮ್ಮ ನಿರೀಕ್ಷೆಯನ್ನಿಟ್ಟಿದ್ದವು. ಆದರೆ ನಮ್ಮ ಹೊಸ ಮತದಾರ ಇದನ್ನು ನಿರಾಕರಿಸಿದ್ದಾನೆ. ಹಿಂದೆಂದೂ ಆಗಿರದಂಥಹ ರಾಷ್ಟ್ರ ಕೇಂದ್ರಿತ ಪ್ರಜ್ನೆಯಿಂದ ಮತಹಾಕಿದ್ದಾನೆ. ಅದರಲ್ಲಿ ಜಾತಿ ಐಡೆಂಟಿಟಿಗಳು ಕೊಚ್ಚಿಕೊಂಡು ಹೋಗಿವೆ. ಅದನ್ನು ಯಾರೂ ಒಪ್ಪಿಕೊಳ್ಳಲೇ ಬೇಕು. ಇನ್ನು ಈ ಕಡೆ ನೋಡಿದರೆ, ಇಂದಿನ ನಮ್ಮ ಪ್ರಗತಿಶೀಲರಲ್ಲಿ ನಾನು ಗಮನಿಸಿದ್ದು, ಒಂದು ನಿರ್ದಿಷ್ಟ ತತ್ವವನ್ನು ಇಟ್ಟುಕೊಂಡು, ವ್ಯಕ್ತಿಗಳ ಬಗ್ಗೆ ವ್ಯವಸ್ಥೆಯ ಬಗ್ಗೆ ಅಭಿಪ್ರಾಯ ಹಾಗೂ ನಿಲುವುಗಳನ್ನು ಹೊಂದುವುದು. ಅದರಲ್ಲಿ ತಪ್ಪೇನಿಲ್ಲ. ಆದರೆ ಆ ವಿಚಾರಗಳು ಉಗ್ರ ದೇಶಪ್ರೇಮ ಇತ್ಯಾದಿ ವಿಚಾರಗಳು ಉದ್ದೀಪಿಸಿದಷ್ಟು ಪ್ರಮಾಣದಲ್ಲಿ ಯುವಕರನ್ನು ಉದ್ದೀಪಿಸೋಲ್ಲ. ಇದು ನನಗನ್ನಿಸಿದ್ದು. ಇದಕ್ಕೆ ವಿರುದ್ಧವಾದ ಅಭಿಪ್ರಾಯಗಳೂ ಇರಬಹುದು. ಆದರೆ ಈ ಅಭಿಪ್ರಾಯ ಮಾತ್ರ ನನ್ನಲ್ಲಿನ ಗೊಂದಲಗಳನ್ನು ಸಮಾಧಾನ ಮಾಡುವ ಯೋಚಾನಾ ಸರಣಿಯ ಫಲಿತ. ಕಡೆಗೆ ಯಾವುದೋ ತತ್ವ ಸಿದ್ಧಾಂತಗಳ ದಾಕ್ಷಿಣ್ಯಕ್ಕೆ ಸಿಕ್ಕು ಅವುಡುಗಚ್ಚಿಕೊಂಡು, ಸಿಕ್ಕ ಜೀವನವನ್ನು ಅನುಭವಿಸದೇ ಇರಲಾದೀತಾ.. ನಮ್ಮ ವರ್ತಮಾನವನ್ನು ಬೆರಗುಗಣ್ಣಿನಿಂದ ನೋಡುತ್ತಾ ಹೋಗುವುದೇ ನನಗೆ ತೋಚಿದ ದಾರಿ.

0 Comments